Yogaraj Bhat:ಕನ್ನಡ ಚಿತ್ರರಂಗದಲ್ಲಿ ಹಲವು ಸ್ಟಾರ್ ನಿರ್ದೇಶಕರಿದ್ದಾರೆ. ಅವರಲ್ಲಿಯೋಗರಾಜ ಭಟ್ ಕೂಡ ಒಬ್ಬರು. ಯೋಗರಾಜ ಭಟ್ಟರು ಮುಂಗಾರು ಮಳೆ ಸಿನೆಮಾದಿಂದ ಕನ್ನಡ ನಾಡಿನವರಿಗೆ ಅಷ್ಟೇ ಯಾಕೆ ವಿಶ್ವಕ್ಕೆ ಪರಿಚಯವಾದರು ಎಂದರೆ ತಪ್ಪಾಗಲಾರದು. ಮುಂಗಾರು ಮಳೆ ಕನ್ನಡ ಚಿತ್ರರಂಗಕ್ಕೆ ಒಂದು ರೀತಿಯಲ್ಲಿ ಶಕ್ತಿ, ಹುಮ್ಮಸ್ಸು ತುಂಬಿದ ಚಿತ್ರ ಎಂದರೆ ಅತಿಶಯೋಕ್ತಿ ಅಲ್ಲ. ಈ ಸಿನೆಮಾದ ಪ್ರೇರಣೆಯಿಂದಲೇ ಹಲವಾರು ಹೊಸಮುಖಗಳು ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಆಗುವಂತಾಯಿತು. ಅಂತಹ ಹಿಟ್ ಸಿನೆಮಾದ ನಿರ್ದೇಶಕ ಯೋಗರಾಜ ಭಟ್. ಯೋಗರಾಜ ಭಟ್ ಅವರು ಇಲ್ಲಿಯವರೆಗೆ ನಮ್ಮ ಪರಮಾತ್ಮ, ಕರ್ನಾಟಕ ರತ್ನ, ಪವರ್ ಸ್ಟಾರ್ ಡಾ. ಪುನೀತ್ ರಾಜ್ಕುಮಾರ್, ಗೋಲ್ಡನ್ ಸ್ಟಾರ್ ಗಣೇಶ, ದುನಿಯಾ ವಿಜಯ್, ಕಿಚ್ಚ ಸುದೀಪ ಸೇರಿದಂತೆ ಹಲವು ಸ್ಟಾರ್ ನಟರ ಸಿನೆಮಾ ನಿರ್ದೇಶನ ಮಾಡಿದ್ದಾರೆ. ಇದರ ಜೊತೆ ಯೋಗರಾಜ ಭಟ್ ಓರ್ವ ಪ್ರತಿಭಾನ್ವಿತ ಚಿತ್ರ ಸಾಹಿತಿಯೂ ಆಗಿದ್ದಾರೆ. ಕಿರುತೆರೆಯಲ್ಲಿ ಪ್ರಸಾರವಾಗುವ ಕಾಮಿಡಿ ಕಿಲಾಡಿಗಳು ಕಾರ್ಯಕ್ರಮದ ತೀರ್ಪುಗಾರರು ಆಗಿದ್ದಾರೆ.
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಕಾಮಿಡಿ ಕಿಲಾಡಿಗಳು ಆರಂಭವಾದಾಗಿನಿಂದಲೂ ಯೋಗರಾಜ ಭಟ್ ತೀರ್ಪುಗಾರರಲ್ಲಿ ಒಬ್ಬರಾಗಿದ್ದಾರೆ. ಹೀಗೆ ಅವರು ತೀರ್ಪುಗಾರರಾಗಲು ಜೀ ಕನ್ನಡ ವಾಹಿನಿಯ ಮುಖ್ಯಸ್ಥ ರಾಘವೇಂದ್ರ ಹುಣಸೂರು ಅವರ ಜೊತೆಗಿರುವ ಸ್ನೇಹವೇ ಕಾರಣವಾಗಿದೆ. ಆದರೆ ಇದೀಗ ಯೋಗರಾಜ ಭಟ್ ಅವರು ರಾಘವೇಂದ್ರ ಹುಣಸೂರು ಅವರ ವಿರುದ್ಧವೇ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅದಕ್ಕಾಗಿ ಎರಡು ಆಡಿಯೋ ಹರಿಬಿಟ್ಟಿದ್ದು ಇದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಯೋಗರಾಜ ಭಟ್ ಅವರು ನಿರ್ದೇಶನ ಜೊತೆ ನಿರ್ಮಾಣಕ್ಕೂ ಇಳಿದ ವಿಚಾರ ಎಲ್ಲರಿಗೂ ತಿಳಿದಿದೆ. ಅವರು ಪದವಿ ಪೂರ್ವ ಎನ್ನುವ ಸಿನೆಮಾ ನಿರ್ಮಾಣ ಮಾಡಿದ್ದು, ಇದರ ಡಿಜಿಟಲ್ ರೈಟ್ಸ್ಗಳನ್ನು ತೆಗೆದುಕೊಳ್ಳುವಂತೆ ಕೇಳಲು ರಾಘವೇಂದ್ರ ಹುಣಸೂರು ಅವರಿಗೆ ಕರೆ ಮಾಡಿದ್ದಾರೆ. ಆದರೆ ರಾಘವೇಂದ್ರ ಅವರು ಯೋಗರಾಜ ಭಟ್ ಅವರ ಕರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇದರಿಂದ ಅಸಮಾಧಾನಗೊಂಡ ಯೋಗರಾಜ ಭಟ್ ಅವರು ರಾಘವೇಂದ್ರ ಅವರ ವಿರುದ್ಧ ಖಂಡಾಪಟ್ಟೆ ಆಕ್ರೋಶ ಹೊರ ಹಾಕಿದ್ದಾರೆ.
ಯೋಗರಾಜ ಭಟ್ ಅವರು ಕಳುಹಿಸಿದ ವಾಯ್ಸ್ ಮೆಸೆಜ್ ನಲ್ಲಿ ಏನಿದೆ ?
ರಾಘವೇಂದ್ರ ನೀನು ಟಿವಿ ವಾಹಿನಿಯನ್ನು ಉದ್ದಾರ ಮಾಡಿದವನಾಗಿ ಸಿನೆಮಾ ಇಂಡಸ್ಟ್ರಿ ಅವರನ್ನು ಉದ್ದಾರ ಮಾಡಪ್ಪ. ಪದವಿ ಪೂರ್ವ ಎನ್ನುವ ಅಚ್ಚ ಕನ್ನಡ ಚಿತ್ರ. ಅದು ಸಹ ತುಂಬಾ ಸುಂದರವಾಗಿ ಮೂಡಿಬಂದಿದೆ. ಈ ಸಿನೆಮಾದ ಡಿಜಿಟಲ್ ಹಕ್ಕುಗಳನ್ನು ತೆಗೆದುಕೊಳ್ಳುತ್ತೇನೆ ಎಂದು ಮಾತು ನೀಡಿದ್ದೆ. ಈಗ ಅದರ ಪ್ರಪೋಸಲ್ ಕಳುಹಿಸಿದ್ದೇನೆ. ಆದರೆ ನೀನು ಈಗ ನನ್ನ ಕರೆಯನ್ನು ಸ್ವೀಕರಿಸುತ್ತಿಲ್ಲ. ನನಗೆ ಈ ಬಗ್ಗೆ ಒಂದು ಸ್ಪಷ್ಟನೆ ಬೇಕು. ನೀನು ತೆಗೆದುಕೊಳ್ಳದಿದ್ದರೆ ಬೇರೆಯವರಿಗೆ ನಾನು ಕೊಡುತ್ತೇನೆ. ಇನ್ನು ಹತ್ತು ನಿಮಿಷದಲ್ಲಿ ನನಗೆ ಕರೆ ಮಾಡಬೇಕು. ಇಲ್ಲದಿದ್ದರೆ ನೀನು ನೇಣು ಹಾಕಿಕೊಂಡು ಸತ್ತುಹೋಗಬೇಕು ಅಂತಹ ಆಡಿಯೋವನ್ನು ಕಳುಹಿಸುತ್ತೇನೆ ಎಂದು ಹೇಳಿದ್ದಾರೆ.
ಇದಾದ ಕೆಲವೆ ಗಂಟೆಯಲ್ಲಿ ಯೋಗರಾಜ ಭಟ್ ಅವರು ಮತ್ತೊಂದು ಆಡಿಯೋ ಬಿಟ್ಟಿದ್ದಾರೆ. ಅದರಲ್ಲಿ, ಅಲ್ಲ ರಾಘು ನೀನು ಯಥಾ ಪ್ರಕಾರ ಕರೆ ಸ್ವೀಕಾರ ಮಾಡುತ್ತಿಲ್ಲ. ಇಪ್ಪತ್ತು ದಿನದಿಂದ ನಿನಗೆ ಕರೆ ಮಾಡುತ್ತಿದ್ದೇನೆ. ಆದರೆ ನೀನು ಫೋನ್ ತೆಗೆದುಕೊಳ್ಳುತ್ತಿಲ್ಲ. ಈಗ ಸರಿಯಾಗಿ ಉಗಿಯುತ್ತೇನೆ. ನೀನು ಸಮಾದಾನವಾಗಿ ಕೇಳಿಸಿಕೊಳ್ಳಬೇಕು ಎಂದು ಹೇಳಿ ಮಾತನಾಡಲು ಶುರು ಮಾಡಿದ್ದಾರೆ.
ಈ ಆಡಿಯೋದಲ್ಲಿ ಕೆಲ ಬಳಸಲು ಸಾಧ್ಯವಾಗದ ಮಾತುಗಳನ್ನು ಆಡಿದ್ದಾರೆ. ನಿನಗೆ ಕಷ್ಟ ಆದಾಗ ನಮ್ಮನ್ನು ಹುಡುಕಿಕೊಂಡು ಬರ್ತಿಯಾ ಆದರೆ ನಮಗೆ ಕಷ್ಟ ಆದಾಗ ಬರುವುದು ಇರಲಿ ಫೋನ್ ಕೂಡ ತೆಗೆಯುವುದಿಲ್ಲ. ಇದು ನನ್ನ ಒಬ್ಬನ ಆರೋಪವಲ್ಲ. ಕನ್ನಡ ಸಿನೆಮಾ ರಂಗದ ಮುಕ್ಕಾಲು ಪಾಲು ಜನರ ಆರೋಪವಾಗಿದೆ. ನಾವೆಲ್ಲ ಕಾಲ್ ಮಾಡುವಷ್ಟು ದೊಡ್ಡವನಲ್ಲ. ನೀನು ತುಂಬಾ ಅಲ್ಪ. ಅದು ನಿನಗೂ ತಿಳಿದರಿರಲಿ ಎಂದು ಹೇಳುತ್ತಿದ್ದೇನೆ ಎಂದಿದ್ದಾರೆ.
ಹೀಗೆ ಮುಂದುವರಿದು, ಯಾವ ಇಂಡಸ್ಟ್ರಿಯನ್ನು ಬಳಸಿಕೊಂಡು ನಿಮ್ಮ ವಾಹಿನಿಯನ್ನು ನಂಬರ್ ೧ ಸ್ಥಾನಕ್ಕೆ ತಂದಿದ್ದಿಯೋ ಅದೇ ಇಂಡಸ್ಟ್ರಿಯವರು ಕರೆ ಮಾಡಿದರೆ ಸ್ವೀಕರಿಸುವುದಿಲ್ಲ ಎಂದರೆ ನೀನು ತುಂಬಾ ಬೆಳೆದಿದ್ದಿಯಾ ಎಂದು ಅರ್ಥ. ಇಲ್ಲವೆಂದರೆ ನಾವು ಸತ್ತಿದ್ದಿವಿ ಎಂದರ್ಥ. ಆದರೆ ನಾವು ಸಾಯೋ ಮಕ್ಕಳಲ್ಲ. ನೀನು ಯಾವುದೇ ಕಾರಣಕ್ಕೂ ಬೆಳೆಯುವ ಮಗ ಅಲ್ಲ. ನಿನ್ನಂತವರನ್ನೆಲ್ಲ ಹೂತು ಆಮೇಲೆ ನಾವು ಹೋಗುತ್ತೇವೆ. ನಿನ್ನ ಅವನತಿ ಶುರುವಾಗಿದೆ. ನೀನು ಬೀಳುತ್ತೀಯ ಆದರೆ ಯಾವ ಎತ್ತರದಿಂದ ಬೀಳುತ್ತೀಯಾ ಎನ್ನುವುದು ತಿಳಿದಿಲ್ಲ. ಇನ್ನು ಮುಂದೆ ನಿನ್ನ ಜೊತೆ ಮಾತ್ರ ಯಾವುದೇ ವ್ಯವಹಾರ ಮಾಡುವುದಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.