Kannada Film:ಇದೀಗ ಕಿರುತೆರೆಗೆ ಹೊಸ ಹೊಸ ಪ್ರತಿಭೆಗಳು ಎಂಟ್ರಿ ಕೊಡುತ್ತಿವೆ. ಕಿರುತೆರೆಯಲ್ಲಿ ತಮ್ಮ ಪ್ರತಿಭೆ ಪರೀಕ್ಷೆಗೊಡ್ಡಿ ಅಲ್ಲಿ ಗೆದ್ದರೆ ಬಿಗ್ ಸ್ಕ್ರೀನ್ನಲ್ಲಿ ಕಾಣಿಸಿಕೊಳ್ಳುವ ಬಯಕೆ ಹಲವರಿಗಿರುತ್ತದೆ. ಆದರೆ ಕೆಲವರು ಬೆಳ್ಳಿತೆರೆಯಲ್ಲಿ ಮಿಂಚಿ ನಂತರ ಕಿರುತೆರೆಯಲ್ಲೂ ತಮ್ಮ ಅದೃಷ್ಟ ಪರೀಕ್ಷೆಗೊಡ್ಡುತ್ತಾರೆ. ಹೀಗೆ ಬೆಳ್ಳಿತೆರೆಯಿಂದ ಕಿರುತೆರೆಗೆ ಬರುತ್ತಿರುವವರು ಸ್ಪರ್ಶ ರೇಖಾ.
ಹೌದು, ಸ್ಪರ್ಶ ರೇಖಾ ಅವರು ಕಿರುತೆರೆಗೆ ಪಾದಾರ್ಪಣೆ ಮಾಡುತ್ತಿದ್ದಾರೆ. ಕಲರ್ಸ್ ಕನ್ನಡದಲ್ಲಿ ಸೋಮವಾರದಿಂದ ಪ್ರಸಾರವಾಗಲಿರುವ ತ್ರಿಪುರ ಸುಂದರಿ ಧಾರಾವಾಹಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸ್ಯಾಂಡಲ್ವುಡ್ನಲ್ಲಿ ಮಿಂಚಿ ನಂತರ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಅದಾದ ಬಳಿಕ ಹಲವು ವರ್ಷಗಳ ಕಾಲ ಚಿತ್ರರಂಗದಿಂದ ದೂರ ಇದ್ದರು. ನಂತರ ಮತ್ತೆ ಬಿಗ್ ಬಾಸ್ ಸ್ಪರ್ಧಿಯಾಗಿ ಆಯ್ಕೆಯಾದರು. ಅಲ್ಲಿ ತಮ್ಮ ಆಟದ ಮೂಲಕ ಜನರ ಪ್ರೀತಿಗಳಿಸಿದರು. ಈಗ ಕಿರುತೆರೆಯಲ್ಲೂ ತಮ್ಮ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಈ ಕುರಿತು ಅವರು ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ್ದು, ಅದರಲ್ಲಿ ಮನಸ್ಸು ಬಿಚ್ಚಿ ಮಾತನಾಡಿದ್ದಾರೆ.
ನಾನು ಯಾವಾಗಲೂ ಕಾಲ್ಪನಿಕ ಕಥೆಗಳ ಅಭಿಮಾನಿ. ಈ ಧಾರಾವಾಹಿಯ ನಿರ್ಮಾಪಕರು ನನ್ನನ್ನು ಭೇಟಿಯಾಗಿ ಈ ಧಾರಾವಾಹಿಯ ಕಥೆಯನ್ನು ಹೇಳಿದಾಗ ನನಗೆ ಬಹಳ ಖುಷಿಯಾಯಿತು. ಈ ಧಾರಾವಾಹಿಯ ಕತೆ ತುಂಬಾನೇ ವಿಭಿನ್ನವಾಗಿರುವುದರಿಂದ ನಾನು ಬಹಳ ಖುಷಿಯಿಂದ ಅಭಿನಯಿಸುತ್ತಿದ್ದೇನೆ. ಈ ಧಾರಾವಾಹಿ ಎಲ್ಲ ಸಿರಿಯಲ್ಗಳ ತರಹ ಇಲ್ಲ. ಇದರ ಕಥೆ ಎಲ್ಲರ ಮನಸ್ಸಿಗೆ ಹತ್ತಿರವಾಗುತ್ತದೆ. ಆದರೆ ಪ್ರೇಕ್ಷಕರು ನನ್ನನ್ನು ಯಾವ ರೀತಿ ಸ್ವೀಕರಿಸುತ್ತಾರೆ ಎನ್ನುವುದಕ್ಕೆ ಬಹಳ ಕುತೂಹಲದಿಂದ ಕಾಯುತ್ತಿದ್ದೇನೆ ಎಂದಿದ್ದಾರೆ.
ಇನ್ನು ತ್ರಿಪುರ ಸುಂದರಿ ಧಾರಾವಾಹಿಯ ಅವರ ಪಾತ್ರದ ಬಗ್ಗೆ ಕೇಳಿದಾಗ, ಈ ಧಾರಾವಾಹಿಯಲ್ಲಿ ತಾಯಿ-ಮಗನ ಬಾಂಧವ್ಯವನ್ನು ತುಂಬಾ ಚೆನ್ನಾಗಿ ತೋರಿಸಲಾಗಿದೆ. ಈ ಧಾರಾವಾಹಿಯಲ್ಲಿ ನಾನು ಒಂದು ಮಗುವನ್ನು ದತ್ತು ಪಡೆದುಕೊಂಡಿರುತ್ತೇನೆ. ಅದು ನನ್ನ ಗಂಡನಿಗೆ ಇಷ್ಟವಾಗಿರುವುದಿಲ್ಲ. ಆ ಕಾರಣಕ್ಕೆ ಅವರು ಮಗನನ್ನು ದ್ವೇಷಿಸುತ್ತಾ ಇರುತ್ತಾರೆ. ಆದರೆ ತಾಯಿಗೆ ಮಾತ್ರ ಮಗನ ಮೇಲೆ ಬೆಟ್ಟದಷ್ಟು ಪ್ರೀತಿ ಇರುತ್ತದೆ ಎಂದು ವಿವರಿಸಿದರು.
ಧಾರಾವಾಹಿ ಲೋಕಕ್ಕೆ ಎಂಟ್ರಿ ಕೊಡುತ್ತಿರುವ ಬಗ್ಗೆಯೂ ರೇಖಾ ಅವರು ಮಾತನಾಡಿದ್ದು, ಇದೀಗ ಕಿರುತೆರೆ, ಬೆಳ್ಳಿತೆರೆ ಎನ್ನುವ ಬೇಧ ಭಾವವಿಲ್ಲ.ಪ್ರಮುಖ ವ್ಯತ್ಯಾಸ ಎಂದರೆ ಅದು ಸಮಯ. ಧಾರಾವಾಹಿಗಳ ಗುಣಮಟ್ಟ ಯಾವುದೇ ಬಿಗ್ ಬಜೆಟ್ ಸಿನೆಮಾಗಳಿಗೂ ಕಡಿಮೆ ಇರುವುದಿಲ್ಲ ಎಂದು ರೇಖಾ ವಿವರಿಸಿದ್ದಾರೆ.